ಮೈಸೂರು ಪೇಟ ಮೈಸೂರು ಸಂಸ್ಥಾನದ ರಾಜಮನೆತನದವರು ತೊಡುವ ಭಾರತೀಯ ಉಡುಗೆ-ತೊಡುಗೆಗಳಲ್ಲಿ ಒಂದಾಗಿದೆ. ರಾಜ ಪೋಷಾಕಿನ ಬಣ್ಣಗಳಿಗೆ ಸರಿಹೊಂದುವಂಥ ರೇಷ್ಮೆನೂಲಿನಿಂದ ನೇಯ್ದ ಬಂಗಾರದ ಜರಿಯುಳ್ಳ ರತ್ನಖಚಿತ ಪೇಟ ಅಥವಾ ಮುಂಡಾಸನ್ನು ಮೈಸೂರು ಒಡೆಯರು ಧರಿಸುತ್ತಿದ್ದರು ಮೈಸೂರು ದೀವಾನರು(ರಾಜರಿಂದ ನೇಮಿಸಲ್ಪಟ್ಟ ಪ್ರಧಾನ ಮಂತ್ರಿಗಳು) ಹಾಗು ರಾಜ್ಯಾಡಳಿತದಲ್ಲಿನ ಉನ್ನತ ಅಧಿಕಾರಿಗಳೂ ಸಾರ್ವಜನಿಕ ಭೇಟಿ ಹಾಗು ಸಭೆಗಳಲ್ಲಿ ಮೈಸೂರು ಪೇಟ ತೊಡುತ್ತಿದ್ದರು ೧೯೪೭ರಲ್ಲಿ ಭಾರತವು ಸ್ವತಂತ್ರಗೊಂಡು ಅನೇಕ ಸ್ವತಂತ್ರ ರಾಜ ಸಂಸ್ಥಾನಗಳು ಭಾರತ ಪ್ರಜಾತಾಂತ್ರಿಕ ಒಕ್ಕೂಟಕ್ಕೆ ಸೇರಿದ ನಂತರ, ಸಮಾಜದ ವಿಶೇಷ ವ್ಯಕ್ತಿಗಳನ್ನು ಸಭೆ ಸಮಾರಂಭಗಳಲ್ಲಿ ಗೌರವಿಸಲು ಸಾಂಕೇತಿಕವಾಗಿ ಮೈಸೂರು ಪೇಟ ತೊಡಿಸಿ ಮತ್ತು ಶಾಲನ್ನು ಹೊದಿಸಿ ಸನ್ಮಾನಿಸಲಾಗುತ್ತದೆ.